ಇಷ್ಟು ದಿನ ಮಳೆ ಇಲ್ಲದೆ ಬಿಸಿಲಿನ ಶಾಖ ಅನುಭವಿಸುತ್ತಿದ್ದ ರಾಜ್ಯದ ಜನ ನಿನ್ನೆಯಿಂದ ಮಳೆಯನ್ನು ನೋಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ.
ಮುಂಗಾರು ಆಗಮನದ ಹಿಂದೆ, ಮುಂದೆ ಅಬ್ಬರಿಸುವ ಸಿಡಿಲು ಬಡಿತದ ಪ್ರಕರಣಗಳು ಸರ್ಕಾರಕ್ಕೆ ಸವಾಲಾಗುತ್ತಿವೆ. ಇತರ ವಿಪತ್ತುಗಳಿಗೆ ಹೋಲಿಸಿದಲ್ಲಿ ಸಿಡಿಲು ಬಡಿತ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಪರಿಣಾಮ ಮಾತ್ರ ಭೀಕರವಾಗಿದೆ.
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಪ್ರಾಕೃತಿಕ ವಿಕೋಪಗಳಿಗೆ 571 ಜೀವಿಗಳು ಬಲಿಯಾಗಿದ್ದು, ಈ ಪೈಕಿ 244 ಜನರು ಸಿಡಿಲಿನಿಂದಲೇ ಜೀವ ತೆತ್ತಿರುವುದು ಸಮಸ್ಯೆಯ ಗಂಭೀರತೆಗೆ ಸಾಕ್ಷಿ.
ಇನ್ನು 2011-2021ರ ಅವಧಿಯ ವರದಿ ಅವಲೋಕಿಸಿದರೆ 812 ಜನರು ಸಿಡಿಲಿಗೆ ಜೀವ ತೆತ್ತಿದ್ದಾರೆ. ಹೀಗಾಗಿ ವಿಕೋಪ ಎದುರಿಸುವುದು ಸರ್ಕಾರಕ್ಕೂ ಸಿಡಿಲು ಬಡಿದ ಅನುಭವ ತರಿಸಿದೆ. ಇತರ ವಿಪತ್ತುಗಳಿಗೆ ಹೋಲಿಸಿದರೆ ಸಿಡಿಲು ಪ್ರಕರಣಗಳು ಜನ ಜೀವನದ ಮೇಲೆ ಗುರುತರ ಪರಿಣಾಮ ಬೀರಿವೆ.
ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು – ಸಿಡಿಲು ಸಾಮಾನ್ಯವಾಗಿ ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಕಾಣಿಸಿಕೊಳ್ಳುತ್ತದೆ. ಸಿಡಿಲು ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಗುಡುಗು ಸಿಡಿಲಿನಿಂದಾಗುವ ಅಪಾಯಗಳನ್ನು ತಗ್ಗಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ.
ಸಿಡಿಲಿನಿಂದ ಜೀವ, ಆಸ್ತಿ, ಮೂಲಸೌಕರ್ಯ, ಜಾನುವಾರು ಮತ್ತು ಜೀವನೋಪಾಯಕ್ಕೆ ಹಾನಿ ಆಗುತ್ತಿದೆ. ಇದು ಸಮಾಜದ ದುರ್ಬಲ ವರ್ಗಗಳ ಮೇಲೆ (ಸಣ್ಣ ಮತ್ತು ಅತಿ ಸಣ್ಣ ರೈತರು, ಮಾರಾಟಗಾರರು, ಉದ್ಯೋಗಿಗಳು ಇತ್ಯಾದಿ) ಪರಿಣಾಮ ಬೀರುತ್ತದೆ. ಹಾನಿ ಪ್ರಮಾಣ ತಗ್ಗಿಸಲು ಸರ್ಕಾರ ಅನೇಕ ಉಪಕ್ರಮ ಕೈಗೊಂಡಿದ್ದರೂ ನಿರೀಕ್ಷಿತ ಫಲಕೊಟ್ಟಿಲ್ಲ.
ರಾಜ್ಯದಲ್ಲಿ ಸಿಡಿಲಿನ ಹೊಡೆತದಿಂದಾಗುವ ನಷ್ಟವನ್ನು ತಗ್ಗಿಸಲು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ರಾಜ್ಯದಾದ್ಯಂತ ಸರ್ಕಾರಿ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಗುಡುಗು ಮತ್ತು ಸಿಡಿಲು ಸಂಭಾವ್ಯತೆ ಬಗ್ಗೆ ಮುನ್ನೆಚ್ಚರಿಕೆ ಒದಗಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ಕಾರ್ಯಗತಗೊಳಿಸಿದೆ.
ಎಲ್ಲೆಲ್ಲಿ ಸಾವು ಹೆಚ್ಚು?
ಮಲೆನಾಡು, ಕರಾವಳಿ ಭಾಗದಲ್ಲಿ ಸಿಡಿಲು ಹೆಚ್ಚು ಸಿಡಿಯುತ್ತವೆ. ಆದರೆ, ಅಲ್ಲಿ ಬೆಟ್ಟ, ಗುಡ್ಡ, ದೂರ ದೂರದ ಜನವಸತಿ, ಪಶ್ಚಿಮಘಟ್ಟಗಳ ಕಾರಣದಿಂದ ಜೀವ ಹಾನಿ ಕಡಿಮೆ. ಆದರೆ, ಸಮತಟ್ಟಾದ ಪ್ರದೇಶದಲ್ಲಿ ಸಿಡಿಲಿನಿಂದ ಮೃತಪಡುವವರ ಸಂಖ್ಯೆ ಅಧಿಕವಾಗಿದೆ.
2024-25 ರಲ್ಲಿ ಒಟ್ಟು ಸಿಡಿಲು ಬಡಿತಕ್ಕೆ 89 ಸಾವು ಸಂಭವಿಸಿದೆ. ರೈತರು ಬಹಳ ಎಚ್ಚರದಿಂದ ಕೆಲಸ ಮಾಡಬೇಕು. ಗಾಳಿ ಜೋರಾಗಿ ಬೀಸಿದಾಗ ಅದರಿಂದ ತಪ್ಪಿಸಿಕೊಳ್ಳಲು ರೈತರು ಮುನ್ನೆಚ್ಚರಿಕೆ ವಹಿಸಬೇಕು. ಕಳೆದ 10 ವರ್ಷದಲ್ಲಿ 812 ಸಾವು ಸಂಭವಿಸಿದೆ.
ಸಿಡಿಲಿಂದ ಪಾರಾಗುವ ಕ್ರಮ –
* ಪ್ರತಿಕೂಲ ಹವಾಮಾನ ಸಮಯದಲ್ಲಿ ಹೆಚ್ಚು ಎಚ್ಚರದಿಂದಿರಿ
* ಕೃಷಿ ಕೆಲಸ, ಜಾನುವಾರು ಮೇಯಿಸಲು ಹೋಗಬಾರದು
* ಮೀನುಗಾರಿಕೆ, ದೋಣಿ ನಡೆಸುವುದು ಸವಾಲಿನ ಕಾರ್ಯ
* ಗುಡುಗು, ಸಿಡಿಲಿನ ವೇಳೆ ಸುರಕ್ಷಿತ ಕಟ್ಟಡಗಳನ್ನು ಆಶ್ರಯಿಸಿ
* ಲೋಹದ ತಗಡು ಹೊಂದಿರುವ ಮನೆಗಳು ಸುರಕ್ಷಿತವಲ್ಲ
* ಎತ್ತರದ ಪ್ರದೇಶ ಬಿಟ್ಟು ತಗ್ಗು ಪ್ರದೇಶಗಳನ್ನು ಆಶ್ರಯಿಸಿರಿ
* ವಿದ್ಯುತ್ ಉಪಕರಣ, ಸರಬರಾಜು ಮಾರ್ಗದಲ್ಲಿ ನಿಲ್ಲದಿರಿ
* ದೂರವಾಣಿ ಸಂಪರ್ಕ, ಮೊಬೈಲ್ ಟವರ್ ಸ್ಥಳ ಡೇಂಜರ್
* ಸಿಡಿಲ ವೇಳೆ ಗುಂಪುಗುಂಪಾಗಿರದೆ ಅಂತರ ಕಾಯ್ದುಕೊಳ್ಳಿ
* ಮಂಡಿಯೂರಿ ಕುಳಿತುಕೊಂಡು ಕಿವಿಗಳನ್ನು ಮುಚ್ಚಿಕೊಳ್ಳಿ
* ಕಬ್ಬಿಣದ ಸರಳುಗಳ ಛತ್ರಿ / ಮೊಬೈಲ್ ಫೋನ್ ಬಳಸದಿರಿ
* ಸಿಡಿಲ ವೇಳೆ ಸ್ನಾನ ಹಾಗೂ ಶವರ್ ತೆಗೆದುಕೊಳ್ಳಬಾರದು
* ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದೂ ಡೇಂಜರ್
ಮಿಂಚು, ಗುಡಗು, ಸಿಡಿಲು ಒಟ್ಟಿಗೆ ಸಂಭವಿಸುತ್ತವೆ. ಆದರೆ ನಮಗೆ ಮಿಂಚು ಮೊದಲು ಕಾಣ ಸಿ ಸ್ವಲ್ಪ ಸಮಯದ ನಂತರ ಗುಡುಗು ಸಿಡಿಲು ಕೇಳಿಸುತ್ತವೆ. ಇದಕ್ಕೆ ಕಾರಣ ಬೆಳಕಿನ ವೇಗ ಶಬ್ದದ ವೇಗಕ್ಕಿಂತ ಹೆಚ್ಚು ಇರುವುದು. ಬೆಳಕಿನ ವೇಗ ಸೆಕೆಂಡಿಗೆ 3 ಲಕ್ಷ ಕಿ.ಮೀ ಆದರೆ, ಶಬ್ದದ ವೇಗ ಸೆಕೆಂಡಿಗೆ 330 ಮೀ. ಇರುತ್ತದೆ. ಆದ್ದರಿಂದ ಮಿಂಚುಕಂಡ ನಂತರ ಗುಡುಗು, ಸಿಡಿಲು ಕೇಳಿಸುತ್ತವೆ.